ಬೇಸಿಗೆಯಲ್ಲಿ ಅಡಿಕೆ ಬೆಳೆಗಾರರ ಅತೀ ದೊಡ್ಡ ಸಮಸ್ಯೆ ತಮ್ಮ ಅಡಿಕೆ ಮರದ ಬುಡದಲ್ಲಿ ರಾಶಿ ರಾಶಿ ಮಿಡಿ ಕಾಯಿಗಳು ಉದುರಿ ಬಿದ್ದಿವೆ. ಇದನ್ನು ನೋಡಿದಾಕ್ಷಣ ಯಾಕೆ ಹೀಗಾಗುತ್ತದೆ, ಹೀಗಾದರೆ ಮುಂದಿನ ಫಸಲು? ಎಂಬ ಪ್ರಶ್ನೆ ಮೂಡುತ್ತದೆ.
ಒಂದು ಅಡಿಕೆ ಉದುರಿದರೂ ರೂ.2 ಎಂಬಂತಿದೆ ಪರಿಸ್ಥಿತಿ. ಇದರ ನಿಯಂತ್ರಣಕ್ಕೆ ಹರ ಸಾಹಸ ಪಡುತ್ತಿದ್ದಾರೆ. ಒಂದೆಡೆ ಬಿಸಿಲಿನ ಧಗೆ,ಬೆಳೆಗಾರರಿಗೆ ತಮ್ಮ ಮರಗಳಿಗೆ ಎಷ್ಟು ನೀರುಣಿಸಿದರೂ ತೃಪ್ತಿ ಎಂದಾಗುವುದಿಲ್ಲ. ನೀರು ಕಡಿಮೆಯಾಗಿ ಮಿಡಿ ಉದುರುತ್ತಿದೆ ಎಂಬುದೇ ಹೆಚ್ಚಿನ ಬೆಳೆಗಾರರ ಅಭಿಪ್ರಾಯ. ನೀರಿನ ಕೊರತೆಯಿಂದ ಮಿಡಿ ಕಾಯಿ ಉದುರುವುದಲ್ಲ. ನೀರಿನ ಕೊರತೆಯಾದರೆ ಮರದ ಲಕ್ಪಣದಲ್ಲಿ ಗೊತ್ತಾಗುತ್ತದೆ. ಗರಿಗಳು ಜೋತು ಬೀಳುತ್ತದೆ. ಮರ ಕಳೆ ಗುಂದಿರುತ್ತದೆ. ಇಷ್ಟಕ್ಕೂ ಒಂದು ಅಡಿಕೆಯ ಮರಕ್ಕೆ ದಿನಕ್ಕೆ ಬೇಕಾಗುವ ನೀರು 20 ಲೀ. ಮಾತ್ರ. ಇದಕ್ಕಿಂತ ಕಡಿಮೆಯಾದರೆ ಮರ ನೀರಿನ ಕೊರತೆ ಅನುಭವಿಸುತ್ತದೆ. ಹವಾಮಾನದ ಕಾರಣದಿಂದ ಮಿಡಿಗಳು ಉದುರುತ್ತದೆ. ಅಲ್ಲದೆ ಮರದ ಹಿಂಗಾರದಲ್ಲಿ ಇರುವ ಎಲ್ಲಾ ಮಿಡಿಗಳು ಉಳಿಯುವ ಸಾದ್ಯತೆ ತುಂಬಾ ಕಡಿಮೆ. ಮೋಡ ಕವಿದ ವಾತಾವರಣ ಇದ್ದರೆ ಕೀಟಗಳು ವಿಶೇಷವಾಗಿ ಟಿ ಸೊಳ್ಳೆಯ ಬಾಧೆ ಉಂಟಾಗುತ್ತದೆ. ಹಿಂದಿನ ವರ್ಷ ಅಡಿಕೆ ತೆಗೆದ ಗೊನೆಯ ಶೇಷಗಳು ಉಳಿದಿದ್ದರೆ , ಅಡಿಕೆ ಇಲ್ಲದೆ ಹೂ ಗೊಂಚಲು ಅಲ್ಲೇ ಒಣಗಿ ಮರಕ್ಕೆ ಅಂಟಿಕೊಂಡಿದ್ದರೆ , ಶಿಲೀಂದ್ರ ರೋಗ ಬರಬಹುದು. ಕಾರಣವನ್ನು ರೈತರೇ ತಮ್ಮ ತೋಟದ ಸ್ಥಿತಿಗತಿ ನೋಡಿ ಪತ್ತೆ ಮಾಡಬೇಕು.
ಉದುರುತ್ತಿರುವ ಎಳೆ ಮಿಡಿ ಕಾಯಿಗಳು ಕೆಲವು ಶಿಲೀಂದ್ರ ಸೋಂಕಿನಿಂದಾಗಿರಬಹುದು, ಮತ್ತೆ ಕೆಲವು ಕೀಟ ಹಾವಳಿಯಿಂದ ಉದುರಬಹುದು. ಇನ್ನು ಸರಿಯಾಗಿ ಬೆಳವಣಿಗೆ ಹೊಂದದೆ ಉದುರಿದ್ದಿರಬಹುದು. ಇದು ಇಂತಹದ್ದೇ ತೊಂದರೆ ಎಂದು ನಿಖರವಾಗಿ ಹೇಳಲು ಬೀಳುವ ಮಿಡಿ ಕಾಯಿಗಳನ್ನು ತಕ್ಷಣವೇ ಪರೀಕ್ಷೆಗೆ ಒಳಪಡಿಸಬೇಕು.
ಉದುರಿದ ಕಾಯಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಇದು ಯಾವ ತೊಂದರೆ ಇರಬಹುದು ಎಂದು ಅಂದಾಜು ಮಾಡಬಹುದು. ಉದುರಿದ ಕಾಯಿಗಳ ತೊಟ್ಟನ್ನು ಸೂಕ್ಷ್ಮವಾಗಿ ಗಮನಿಸಿ. ಅನುಕೂಲವಿದ್ದರೆ ಮಸೂರದ ಸಹಾಯದಿಂದ ಪರೀಕ್ಷಿಸಿ. ಆಗ ಅದರ ತೊಟ್ಟಿನ ಭಾಗದಲ್ಲಿ ಯಾವುದಾದರೂ ಹೇನುಗಳಿಂದ ಆದ ತೊಂದರೆ ಇರಬಹುದು. ಅದೇ ರೀತಿಯಲ್ಲಿ ತೊಟ್ಟನ್ನು ತೆಗೆದು ನೋಡಿದಾಗ ಏನಾದರೂ ಸೂಜಿಯಿಂದ ಚುಚ್ಚಿದ ಗುರುತುಗಳು ಕಂಡು ಬಂದರೆ ಅದೂ ಹೇನು ಇಲ್ಲವೇ ನುಶಿಯಿಂದಾದ ತೊಂದರೆ. ಇನ್ನೂ ಕೆಲವು ಕಾಯಿಗಳ ತೊಟ್ಟು ತೆಗೆದು ನೋಡಿದಾಗ ಸ್ವಲ್ಪ ದೊಡ್ಡ ಗಾತ್ರದ ಗಾಯಗಳು ಕಾಣಸಿಗುತ್ತದೆ. ಇದೂ ಸಹ ಒಂದು ರಸ ಹೀರುವ ಕೀಟದ ತೊಂದರೆ. ಯಾವಾಗಲೂ ಕೀಟಗಳು ಎಳೆ ಭಾಗವನ್ನು ಚುಚ್ಚಿ ಹಾನಿ ಮಾಡುತ್ತವೆ. ಆದ ಕಾರಣ ತೊಟ್ಟಿನ ಭಾಗವನ್ನು ಪರೀಕ್ಷಿಸಬೇಕು. ಶಿಲೀಂದ್ರ ಸೋಂಕನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾಗಬಹುದು. ಆದರೂ ಒಣಗಿ ಜೋತಾಡುವ ಸಿಂಗಾರಗಳು ಅಧಿಕ ಪ್ರಮಾಣದಲ್ಲಿ ಇದ್ದರೆ ಶಿಲೀಂದ್ರ ರೋಗದ ಬಗ್ಗೆ ಸಂಶಯ ಪಡಬಹುದು .
ಎಲ್ಲಾ ಅಡಕೆಯ ಮಿಡಿ ಉದುರುವುದಕ್ಕೆ ಕೀಟ, ಶಿಲೀಂದ್ರಗಳೇ ಕಾರಣವಲ್ಲ. ಕೆಲವೊಮ್ಮೆ ಪರಾಗಸ್ಪರ್ಶ ಕ್ರಿಯೆಯು ಸಮರ್ಪಕವಾಗಿ ನಡೆಯದೆ ಉದುರುವುದಿದೆ. ಗಾಳಿ ಮತ್ತು ಕೀಟಗಳಿಂದ ಪರಾಗಸ್ಪರ್ಶ ಹೊಂದುವ ಅಡಿಕೆಗೆ ವಾತಾವರಣದ ಅನುಕೂಲವೂ ಅಗತ್ಯ. ಅದು ಲಭ್ಯವಾಗದೇ ಉದುರುವುದು ಎಲ್ಲಕ್ಕಿಂತ ಹೆಚ್ಚು ಇರುತ್ತದೆ. ಉದುರಿದ ಅಡಿಕೆಯ ತೊಟ್ಟಿನ ಭಾಗದಲ್ಲಿ ಬೆಂದಂತಹ ಚಿಹ್ನೆ ಕಂಡು ಬಂದರೆ ಇದು ಶಿಲೀಂದ್ರದಿಂದ ಉಂಟಾಗುವ ಸಮಸ್ಯೆ. ಯಾವಾಗಲೂ ಮಿಡಿ ಕಾಯಿ ಉದುರಿದ ತಕ್ಷಣವೇ ಅದನ್ನು ಈ ರೀತಿ ಪರೀಕ್ಷಿಸಬೇಕು. ಅಡಿಕೆ ಮರಗಳಿಗೆ ಬೆಳೆ ಸಂರಕ್ಷಣೆಗಾಗಿ ಬೇಸಿಗೆಯ ಆರ್ದ್ರ ವಾತಾವರಣ ಇರುವಾಗ ಹೂ ಗೊಂಚಲಿಗೆ ಒಮ್ಮೆ ಹೇನು, ನುಶಿ ನಾಶಕವನ್ನು ಸಿಂಪರಣೆ ಮಾಡುವುದು ಸೂಕ್ತ. ಇದಲ್ಲದೇ ಇನ್ನೊಮ್ಮೆ ಮ್ಯಾಂಕೋಜೇಬ್ ಝಢ್ 78 ಅಥವಾ ಪ್ರೊಪೆನೆಟ್ ಅನ್ನು ಸಿಂಪರಣೆ ಮಾಡಬೇಕು. ಇವೆರಡನ್ನು ಮಿಶ್ರಣಮಾಡಿ ಸಿಂಪರಣೆ ಮಾಡಕೂಡದು. ಸೂಕ್ಷ್ಮ ಪೋಷಕಾಂಶದ ಕೊರತೆಯಿಂದಲೂ ಮಿಡಿಗಳು ಉದುರಬಹುದು. ಈ ಸಮಯದಲ್ಲಿ ಒಮ್ಮೆ ಗೊಬ್ಬರ ಕೊಡುವುದು ಉತ್ತಮ. ಅಡಿಕೆ ತೋಟಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರುಣಿಸಬೇಡಿ. ಮರವನ್ನು ಸ್ವಚ್ಚವಾಗಿಡಿ. ಬಿಸಿಲು, ಗಾಳಿಯಾಡುತ್ತಿದ್ದರೆ ಕಾಯಿ ಕಟ್ಟುವಿಕೆಗೆ ಒಳ್ಳೆಯದು.
12 ವರ್ಷದ ಅಡಿಕೆ ತೋಟದಲ್ಲಿ ಮಿಡಿ ಅಡಿಕೆ ಉದುರಿವಿಕೆ ಜಾಸ್ತಿ ಆಗಿದೆ...ಸುಮಾರು 3 ರಿಂದ 4 ಹೂ ಬಿಟ್ಟು ಉದುರಿವೆ.
ReplyDelete